‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

ನೇತಾಜಿ ಸುಭಾಷಚಂದ್ರ ಬೋಸ್ ಭಾರತೀಯ ಆಡಳಿತಾತ್ಮಕ ಪರೀಕ್ಷೆಯಾಗಿದ್ದ ‘ಐ.ಸಿ.ಎಸ್.’ (Indian Civil Service) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು.
ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರಕ್ಕೆ ಒಂದು ಭಾಗವನ್ನು ನೀಡಲಾಗಿತ್ತು.
ಆ ಭಾಗದ ಶಿರೋನಾಮೆಯು ಮುಂದಿನಂತೆ ಇತ್ತು – ‘Indian Soldiers are generally Dishonest’ (ಅಂದರೆ ‘ಸಾಮಾನ್ಯವಾಗಿ ಭಾರತೀಯ ಸೈನಿಕರು ಅಪ್ರಮಾಣಿಕರು’).
ಇಂತಹ ವಿಷಯದ ಮೇಲೆ ಇದ್ದ ಆಂಗ್ಲ ಭಾಗವನ್ನು ಪರೀಕ್ಷಾರ್ಥಿಗಳು ಭಾಷಾಂತರ ಮಾಡಬೇಕಿತ್ತು.
ಇದನ್ನು ನೋಡಿದ ಸುಭಾಷಚಂದ್ರ ಈ ಪ್ರಶ್ನೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.
ಪರೀಕ್ಷೆಯ ಮೇಲ್ವಿಚಾರಕರಿಗೆ ಆ ಪ್ರಶ್ನೆಯನ್ನು ರದ್ದುಪಡಿಸುವಂತೆ ಕೇಳಿಕೊಂಡರು. ಆದರೆ ‘ಈ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಈ ಪ್ರಶ್ನೆಗೆ ಉತ್ತರಿಸದ ಅಭ್ಯರ್ಥಿಗಳಿಗೆ ಉನ್ನತ ಪದವಿಯನ್ನು ನಿರಾಕರಿಸಲಾಗುವುದು’ ಎಂಬ ಉತ್ತರವನ್ನು ಮೇಲ್ವಿಚಾರಕರು ನೀಡಿದರು.
ಈ ಉತ್ತರವನ್ನು ಕೇಳಿದ ಸುಭಾಷರ ಕೋಪ ದ್ವಿಗುಣಗೊಂಡಿತು. ಕೈಯಲ್ಲಿ ಇದ್ದ ಪ್ರಶ್ನೆ ಪತ್ರಿಕೆಯನ್ನು ಅವರು ಚೂರು ಚೂರು ಮಾಡಿದರು.
ಮೇಲ್ವಿಚಾರಕರನ್ನು ಸಂಬೋಧಿಸಿ ‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ! ನನ್ನ ದೇಶದ ಬಾಂಧವರ ವಿರುದ್ಧ ಇಂತಹ ಹುಸಿ ಆರೋಪವನ್ನು ಸಹಿಸಿ ಬದುಕುವ ಬದಲು ಹಸಿವಿನಿಂದ ಸಾಯುವುದೇ ಲೇಸು! ಇಂತಹ ಗುಲಾಮಗಿರಿಗಿಂತ ಸಾವೇ ಒಳಿತು!’ ಎಂದು ಉದ್ಗರಿಸಿದ ಸುಭಾಷ ಪರೀಕ್ಷೆಯ ಸಭಾಗೃಹದಿಂದ ಹೊರನಡೆದರು.

Leave a Comment

Your email address will not be published. Required fields are marked *

Scroll to Top