ಅಗ್ನಿಪಥಿಕೆ ನಿವೇದಿತಾ

ಸ್ವಾಮಿ ವಿವೇಕಾನಂದರ ಶಿಷ್ಯತ್ವವನ್ನು ಸ್ವೀಕರಿಸಿ ಭಾರತಕ್ಕೆ ಬಂದು ಇಲ್ಲಿಯವರೇ ಆಗಿ, ಇಲ್ಲಿನ ಸಾಂಸ್ಕೃತಿಕ ಪರಂಪರೆಯೊಡನೆ ತಾದಾತ್ಮ್ಯ ಸಿದ್ಧಿಸಿಕೊಂಡು ಸಾರ್ವಜನಿಕ ಜೀವನದ ಎಲ್ಲ ಅಂಗಗಳಲ್ಲಿ ತಮ್ಮನ್ನು ಸಂಪೂರ್ಣ ವಿಲೀನಗೊಳಿಸಿಕೊಂಡವರು ಭಗಿನಿ ನಿವೇದಿತಾ. ಇಂತಹ ಸುಂದರ ಪುತ್ಥಳಿಯನ್ನು ಕಡೆದ ಶಿಲ್ಪಿ ಎಂದರೆ ಅದು ಸ್ವಾಮಿ ವಿವೇಕಾನಂದರು ಎನ್ನುವುದು ವಿವಾದಾತೀತ. ವಿವೇಕಾನಂದರ ಬೌದ್ಧಿಕ ವಾರಸುದಾರರು ಎನ್ನುವ ಶ್ರೇಯವೂ ಅವರಿಗೆ ದಕ್ಕಿತು. ‘ನನ್ನ ಮಟ್ಟಿಗೆ ಸ್ವಾಮಿ ವಿವೇಕಾನಂದರೇ ನನ್ನ ಧರ್ಮವೂ ರಾಷ್ಟ್ರಭಕ್ತಿಯೂ ಆಗಿರುತ್ತಾರೆ’ ಎಂದು ಘೋಷಿಸಿಕೊಂಡ ನಿವೇದಿತಾ ‘ಯಾವುದೋ ಕಾಣದ ದೈವಕ್ಕೆ ದಾಸರಾಗಿರುವುದಕ್ಕೆ ಬದಲಾಗಿ ಪ್ರತ್ಯಕ್ಷ ಕಾಣುವ ಭಾರತಮಾತೆಗೆ ಅಡಿಯಾಳುಗಳಾಗೋಣ’ ಎನ್ನುವ ಸಂದೇಶವನ್ನು ಸಾರಿದ್ದನ್ನು ಲೇಖಕರು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ನಿವೇದಿತಾ ತಾನು ಪ್ರೀತಿಸಿದ, ಆರಾಧಿಸಿದ ಭಾರತಕ್ಕೆ ನೀಡಿದ ಕೊಡುಗೆಯನ್ನು ಲೇಖಕರು ಇದರಲ್ಲಿ ಅನಾವರಣಗೊಳಿಸಿದ್ದಾರೆ. ಈ ಕೃತಿಯಲ್ಲಿ ಮೂರು ಭಾಗಗಳಿದ್ದು, ಭೂಮಿಕೆಯಲ್ಲಿ ನಿವೇದಿತಾ ಜೀವಿತಕಾರ್ಯದ ಸಾಂದರ್ಭಿಕತೆಯ ವಿವರ, ಭಾಗ –2ರಲ್ಲಿ ಜೀವನಪಯಣ ಸಮೀಕ್ಷೆ ಹಾಗೂ ಭಾಗ –3ರ ಅನುಬಂಧದಲ್ಲಿ ಜೀವನರೇಖೆಗಳು, ನಿವೇದಿತಾ ಸೂಕ್ತಿಸಂಚಯವಿದೆ. ‘ದೇಶಭಕ್ತಿಯನ್ನು ಪುಸ್ತಕಗಳು ಕಲಿಸಲಾರವು. ಅಪ್ಪಟ ದೇಶಭಕ್ತಿಯು ವ್ಯಕ್ತಿಯ ಕಣಕಣವನ್ನೂ ವ್ಯಾಪಿಸಿರುತ್ತದೆ. ವ್ಯಕ್ತಿಯ ಮೂಳೆ– ಮಜ್ಜೆಗಳೊಡನೆ ಏಕೀಭವಿಸಿರುತ್ತದೆ. ಉಸಿರಾಡುವ ಗಾಳಿಯಲ್ಲಿಯೂ ಕಿವಿಗೆ ಕೇಳಬರುವ ಎಲ್ಲ ಧ್ವನಿಗಳಲ್ಲೂ ಅದು ಅನುರಣಿತವಾಗುತ್ತಿರುತ್ತದೆ’ ಎನ್ನುವ ಅವರ ಸೂಕ್ತಿಸಂಚಯ ಓದುಗರ ಮನದಲ್ಲೂ ಅನುರಣಿಸುತ್ತದೆ. ಅಗ್ನಿಪಥಿಕೆ ನಿವೇದಿತಾ ಲೇ: ಎಸ್.ಆರ್. ರಾಮಸ್ವಾಮಿ ಪ್ರ: ರಾಷ್ಟ್ರೋತ್ಥಾನ ಸಾಹಿತ್ಯ ಮೊ: 97425 88860

courtsey:prajavani.net

https://www.prajavani.net/artculture/book-review/sister-nivedita-book-703871.html

Leave a Comment

Your email address will not be published. Required fields are marked *

Scroll to Top