ದೇವರಿಗೊಂದು ಪತ್ರ(26)

ದೇವರಿಗೊಂದು ಪತ್ರ(26)
ಸೌಖ್ಯ ನಾನು,ಬೇರೆ ಹೇಳಲೇನು?
ಮನದ ತುಂಬಾ ಆವರಿಸಿರುವೆ ನೀನು
ಕೋರಿಕೆ ಇದೋ ನನ್ನಾತ್ಮನದು ಕೇಳು ನೀನು!

ತನುವೆನ್ನ ಶುದ್ಧಿ ಮಾಡೋ ಘನ ಶ್ಯಾಮ
ಮನವೆನ್ನ ಶುದ್ಧಿ ಮಾಡೋ ರಾಧಾ ರಮಣ
ಚಿತ್ತವೆನ್ನ ಶುದ್ಧಿ ಮಾಡೋ ಗೋವರ್ಧನ

ಹೃದಯದ ರಕ್ತನಾಳದಲ್ಲಿ ನೀ ಹರಿಯೋ ಕೃಷ್ಣ
ಶ್ವಾಸದಲಿ ನಿನ್ನ ಗಂಧಗಾಳಿ ಬೀಸಲಿ ಗೋಪಾಲ
ಕರ್ಣದಲಿ ನಿತ್ಯ ಕೊಳಲ ಇನಿದನಿ ರಿಂಘಣಿಸಲಿ ಮುರಳಿಲೋಲ

ಸತ್ಯ ಮಾತ್ರಕೆ ಮನಸು ಒಲಿಯುತಿರಲಿ ಅಚಲ
ಮಾಯೆಗೆ ಚಂಚಲವಾಗದಿರಲಿ ಮನವು ದೇವ
ಮಥಿಸಿ ಮಥಿಸಿ ಮೊಸರಲಿ ಬೆಣ್ಣೆ ಬರುವಂದದಿ ಮೃದುವಾಗಿರಲಿ ತನುವು ಮಾಧವ

ಗರ್ವವಳಿದು ಬಾಗುತಿರಲಿ ಶಿರವು ಸಜ್ಜನರೊಳು ಕಡಲೊಡೆಯ!
ಅರಿವು ಮೂಡುವಂಥ ಅನುಭವವೂ ನಿತ್ಯ ನೀಡುತಿರು ಯಶೋದ ತನಯ
ಬರುವುದೆಲ್ಲ ನೀನೇ ಕರುಣಿಸಿದ ಫಲವು ಜಗದೊಡೆಯ

ಘನ ಪ್ರೇಮಪಾಶದಲ್ಲಿ ನಿನ್ನ ನಾ ಸಿಲುಕಿಹೆನು ಗೋಪಾಲ
ಕೊಡುಸಾಕು ನಿನ್ನ ಪ್ರೇಮ ಭಿಕ್ಷೆ ನೀ ಎನಗೆ ನಂದನಪಾಲ
ನಿತ್ಯ ಉಸಿರುಸಿರಲಿ ನೀ ಬೆರೆತು ಧ್ಯಾನಿಯಾಗಿಸು ಜಗದ್ಪಾಲ

ನನ್ನ ಈ ಕೋರಿಕೆಗೆ ನಿನ್ನ ಒಂದು ಸಂಕೇತ ಸಾಕು . ಅದಕಾಗಿ ಸದಾ ಕಾಯುವ ನಿನ್ನ

ಉಮಾ ಭಾತಖಂಡೆ.

 

Leave a Comment

Your email address will not be published. Required fields are marked *

Scroll to Top