ದೇವರಿಗೊಂದು ಪತ್ರ -31

ದೇವರಿಗೊಂದು ಪತ್ರ (31)
ನಾ ಸೌಖ್ಯಳೆಂದು ಹೇಗೆ ಹೇಳಲಿ ಕರುಣಾಕರ?
ನಿನ್ನ ಸುಳಿವೂ ಇಲ್ಲ, ಈ ನಡುವೆ! ಪ್ರಿಯಕರ
ನನ್ನೊಡನೆ ತುಸು ಮುನಿಸಾಗಿರ ಬಹುದಲ್ಲವೆ ?ಹಿತಕರ!
ಪತ್ರ ಕೊಂಚ ತಡವಾಗಿ ಬರೆದೆನೆಂದು ಮನದಿಂದ ದೂರಾದೆಯಾ?ಮುರಳೀಧರ
ಕಾರಣಗಳ ಕೊಡಲಾರೆ ನಾ ಎಲ್ಲ ಬಲ್ಲ ಪ್ರಾಣನಾಯಕನಿಗೆ
ಹೇಳತೀರದಷ್ಟು ದುಃಖವಾಗಿದೆ ಬರೆಯದೆ ಉಳಿದ ವಿಷಯಗಳಿಗಾಗಿ ನನಗೆ
ಕಳೆದೆ ಹೇಗೋ ಅರಿಯೆ ಈ ನಡುವೆ ಆ ದಿನಗಳ ನುಂಗಿ ಎದೆಯೊಳಗೆ
ಆದರೂ ನೀ ಸದಾ ಜೊತೆಗೆ ಇದ್ದೆ ಬಿಡದೆ ಒಂಟಿ ನನಗೆ
ನೀ ಕೊಡುವ ಕ್ಷಣ ಕ್ಷಣದ ಅನುಭವವೂ ನನ್ನ ಶುದ್ಧಿಗೆ ಜಗದೋದ್ಧಾರ
ಮಾಯೆಗೆ ಸಿಲುಕದಂತೆ ಎನ್ನ ಮನವ ಸ್ಥಿರವಾಗಿಡು ಲೋಕ ಹರಿಕಾರ
ನೆನಪಾಗಿ ನಿನ್ನ ಬಿಕ್ಕಳಿಸಿ ಬಿಕ್ಕಳಿಸಿ ಬರುತಿಹುದು ದುಃಖ ಯಶೋಧರ
ದೂರವಾಗದಿರು ನೆನಹುಗಳಿಗು ಬಾರದಂತೆ ಕರುಣಾ ಸಾಗರ
ನನ್ನಲ್ಲಿ ಉಳಿದಿಹದೇನು ನಿನ್ನ ನಾಮಜಪವಲ್ಲದೆ ಮಧುಕರ
ನಾ ಬಿಡುವೇನೆಂದು ತಿಳಿಯ ಬೇಡ ನೀ ಮರೆಯಾದರೂ
ಹಗಲಿರುಳು ಪರಿತಪಿಸಿ ಪಡೆವೆ ನಿನ್ನ, ಕಳೆಯ ಬೇಕಿದೆ ಕರ್ಮಗಳ
ಬಲವರ್ಧನೆಗೆ ನೀನಲ್ಲದೆ ಯಾರಿಹರು ಎನಗೆ ಓ ಜ್ಞಾನವರ್ಧಕ
ಪತ್ರದ ಉತ್ತರಕ್ಕೆ ಸದಾ ಕಾಯುವ ನಿನ್ನ ಆತ್ಮಸಖಿ

ಉಮಾ ಭಾತಖಂಡೆ.

Leave a Comment

Your email address will not be published. Required fields are marked *

Scroll to Top